Article
(ಡಾ| ಎಂ. ಪ್ರಭಾಕರ ಜೋಶಿ | Feb 10, 2012 )
Update : Ravindar Devadiga Sharjah
ದಿ| ಬಜ್ಪೆ ದೇರಣ್ಣ ದೇವಾಡಿಗರು.
ಕಲೆಯಲ್ಲಿ ಒಳ್ಳೆಯ ಅರಿವು, ಸಂಪ್ರದಾಯದ ಜ್ಞಾನ ಇದ್ದರೂ ಎಲ್ಲರೂ ಪ್ರಸಿದ್ಧರಾಗಿ "ಮೆರೆಯುವುದಿಲ್ಲ'. ಆದರೆ ಅಂಥವರು ಕಲಾಕ್ಷೇತ್ರಕ್ಕೆ ತುಂಬ ಉಪಯುಕ್ತತೆ ಉಳ್ಳ ಸಂಪನ್ಮೂಲ ಕಲಾವಿದರಾಗುತ್ತಾರೆ. ಅಂತಹ ಓರ್ವ ಸ್ಮರಣೀಯ ಕಲಾವಿದರೆಂದರೆ ಇದೇ 24-1-2012ರಂದು ನಿಧನ ಹೊಂದಿದ ಬಜ್ಪೆ ದೇರಣ್ಣ ದೇವಾಡಿಗರು.
ಮನೆತನದಲ್ಲಿ ಒಂದಿಷ್ಟು ಕಲೆಯ ಹಿನ್ನೆಲೆ ಇದ್ದರೂ ದೊಡ್ಡ ಬೆಂಬಲ ಅಥವಾ ಪ್ರಭಾವಳಿಯ ಬಲ ಇಲ್ಲದೇ ತುಂಬ ಪ್ರತಿಕೂಲಗಳ ಮಧ್ಯೆ ಬೆಳೆದು ಕಲಾವಿದರಾದವರು ದೇರಣ್ಣ. ಅನೇಕ ಒಡನಾಡಿ ಹಿರಿಯರಿಂದ, ಮುಖ್ಯವಾಗಿ ನಾಟ್ಯಾಚಾರ್ಯ ಕಾವು ಕಣ್ಣನವರಿಂದ ನೃತ್ಯವನ್ನು ಕಲಿತವರು. ಅಗರಿ ಭಾಗವತರ ಸಹಿತ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ಬೆಳೆದರು. ವೇಷಧಾರಿ ಮತ್ತು ಯಕ್ಷಗಾನ ಗುರುವಾಗಿ ಆರು ದಶಕಗಳ ಕಾಲ ಪ್ರವೃತ್ತರಾಗಿದ್ದರು. ಕಟೀಲು ಮೇಳದಲ್ಲಿ ನಿತ್ಯವೇಷದಿಂದ ಆರಂಭಿಸಿ, ಮುಂದೆ ಹಂತ ಹಂತವಾಗಿ ವ್ಯವಸಾಯ ನಿರತರಾಗಿ ಎಲ್ಲ ಬಗೆಯ ವೇಷಗಳನ್ನು ಮಾಡುತ್ತಿದ್ದರು. ಪುಂಡುವೇಷ, ಸ್ತ್ರೀ ವೇಷ, ಕಿರೀಟದ ವೇಷ -ಈ ಮೂರೂ ಬಗೆಗಳಲ್ಲಿ ಅವರಿಗೆ ಹಿಡಿತವಿತ್ತು. ತೀರಾ ಭಿನ್ನ ಸ್ವಭಾವದ ಪಾತ್ರಗಳಿಗೂ ಸಲೀಸಾಗಿ ಹೊಂದುತ್ತಿದ್ದರು. ತುಳು ಪ್ರಸಂಗಗಳಲ್ಲೂ ಬಹುಕಾಲ ವೇಷ ಮಾಡಿದ್ದರು. ಕರ್ನಾಟಕ, ಸುಂಕದಕಟ್ಟೆ, ತಳಕಳ ಇತ್ಯಾದಿ ಮೇಳಗಳಲ್ಲಿ ವ್ಯವಸಾಯಿ. ಕಲಾವಿದರಾಗಿ ಅವರು ಹೆಚ್ಚು ಬೆಳಕಿಗೆ ಬಂದುದು ಸುರತ್ಕಲ್ ಮತ್ತು ಕರ್ನಾಟಕ ಮೇಳಗಳಲ್ಲಿ.
ಪ್ರಸಂಗಗಳ ರಂಗದ ನಡೆ, ವಿಧಾನ, ಪ್ರದರ್ಶನ ಸಂಪ್ರದಾಯಗಳ ತಿಳಿವು ನೀಡುವವರಾಗಿ ದೇರಣ್ಣ ತುಂಬ ಪ್ರಸಿದ್ಧರು. ಇಂಥವರನ್ನು "ದಾರಿ ಹೇಳಿ ಕೊಡುವವರು' ಎನ್ನುವುದುಂಟು. 50ಕ್ಕೂ ಮಿಕ್ಕಿದ ಪ್ರಸಂಗಗಳ ಸಾದ್ಯಂತ ರಂಗಪದ್ಧತಿ ಅವರಿಗೆ ತಿಳಿದಿತ್ತು. ಎಲ್ಲ ಬಗೆಯ ವೇಷಗಳಲ್ಲಿ ಅವರು ಯಶಸ್ವಿ ಆಗಲು ಕಾರಣ ಈ ಅಂಶವೇ. ವಿಕಾರವಿಲ್ಲದ ಚೊಕ್ಕ ಕುಣಿತ, ಹದವಾದ ಮಾತು, ಭಾವ ಪ್ರಕಟನೆಗಳಿಂದ ವಿವಿಧ ಪಾತ್ರಗಳನ್ನು ಅವರು ನಿರ್ವಹಿಸುತ್ತಿದ್ದರು.
ಯಕ್ಷಗಾನ ಶಿಕ್ಷಕರಾಗಿ ಮೂಡಬಿದಿರೆ, ಬಜಪೆ, ಕೈಕಂಬ, ಮಿಜಾರು ಪ್ರದೇಶಗಳಲ್ಲಿ ಹತ್ತಾರು ವರ್ಷ ದುಡಿದರು. ದೇರಣ್ಣ ಸುಮಾರು ಒಂದು ಸಾವಿರ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಶಿಕ್ಷಕರಿಗಿರಬೇಕಾದ ಸತತ ಆಸಕ್ತಿ, ತಾಳ್ಮೆ ಅವರಲ್ಲಿ ತುಂಬಿದ್ದವು. ವ್ಯಕ್ತಿಶಃ ತುಂಬ ಸರಳ, ತುಂಬ ಸಜ್ಜನರಾಗಿದ್ದವರು. ಕಲಾವಿದರಾಗಿ, ಓರ್ವ ಮಧ್ಯಮ ಮಟ್ಟದ ಸರ್ವಪಾತ್ರ ಸಮರ್ಥ ವೇಷಧಾರಿಯಾಗಿ ದೇರಣ್ಣ ಮೇಳಕ್ಕೆ ಅತ್ಯಂತ ಅಗತ್ಯ ಬಹೂಪಯೋಗಿ ಕಲಾವಿದ. ತರಬೇತುದಾರರಾಗಿ ಅವರ ಸೇವೆ ಮಹತ್ವದ್ದು.
ಉಡುಪಿ ಕಲಾರಂಗ ಪ್ರಶಸ್ತಿ, ಭೂತನಾಥೇಶ್ವರ ಪ್ರಶಸ್ತಿ, ದೋಗ್ರ ಪೂಜಾರಿ ಪ್ರಶಸ್ತಿಗಳ ಮೂಲಕ ಅವರ ಕಲಾಸೇವೆಗೆ ಇತ್ತೀಚೆಗೆ ಒಂದಿಷ್ಟು ಮನ್ನಣೆ ಸಂದಿತ್ತು.
Comments
Order by:
Per page:
MohandasShriyan wrote 89 Days Ago (neutral) 0Please accept my condolence on your losses
We must blame ourselves for not recognising such personality.
1 pointHiriadkaMohandas wrote 90 Days Ago (neutral) 0My deepest condolences to the bereaved family. Thanks to the reporter. We miss out such personalities due to non recognition by our own people.
0 points
| Advertisement | |
![]() |








